My solo trek at Ettina Bhuja
| Ettina Bhuja view from Bairapura village. |
ಹೀಗೊಂದು ದಿನ, ನಾನು ನನ್ನ ಮೂರನೆಯ ಒಂಟಿ ಚಾರಣಕ್ಕೆ ಅಣಿಯಾದೆ. ನಾನು ಹೋಗಬೇಕೆಂದು ಅಂದುಕೊಂಡದ್ದು ಧರ್ಮಸ್ಥಳ, ಬೆಳ್ತಂಗಡಿ ಬಳಿಯ ಶಿಶಿಲ ಎನ್ನುವ ಗ್ರಾಮದಿಂದ ಎತ್ತಿನಭುಜದಂತೆಯ ಕಾಣುವ ಒಂದು ಗುಡ್ಡಕ್ಕೆ. ಅಲ್ಪಸ್ವಲ್ಪ ಜಾಲಾಡಿ ಇಂಟರ್ನೆಟ್ ನಲ್ಲಿ ತಿಳಿದುಕೊಂಡಿದ್ದೆ ನಾದರು ಪೂರ್ಣತಿಳಿದಿರಲಿಲ್ಲ, ಇದು ಒಂಥರಾ ಥ್ರಿಲ್ಲಿಂಗ್ ಆಗಿತ್ತು. ನಿಜವಾದ್ ಥ್ರಿಲ್ಲಿಂಗ್ ಎಂದರೆ ನಾನು ಆ ಗುಡ್ಡ ಹತ್ತಿ ಬಂದ ನಂತರ ಅದೇ ಇಂಟರ್ನೆಟ್ ನಲ್ಲಿ ಮನುಷ್ಯನಿಗೆ ಒಂದು ಪಾಯಿಂಟ್ ಆಫ಼್ ರೆಫ಼ೆರೆನ್ಸ್ ಅಥವಾ ತಾನು ಹೋಗಬೇಕಾದ ಸ್ಥಳದ ಬಗ್ಗೆ ಸ್ಪಷ್ಟ ಗುರುತು ಇಲ್ಲದಿದ್ದಲ್ಲಿ, ನೇರವಾಗಿ ನಡೆಯಲು ಹೇಳಿದರೆ, ತಾನು ನೇರ ಹೋಗುತ್ತಿದ್ದೇನೆ ಎಂದುಕೊಂಡೇ ವರ್ತುಲಾಕಾರದಲ್ಲಿ ಸುತ್ತು ಹೊಡೆಯುತ್ತಿರುತ್ತಾನೆ. ಅದಕ್ಕೆ ಮಾನವನ ಒಂದು ಕಾಲು ಇನ್ನೊಂದಕ್ಕಿಂತ ಚಿಕ್ಕದಿರುತ್ತದೆ, ಅದರಿಂದ ತನಗರಿವಿಲ್ಲದೆಯೇ ತಾನು ನೇರ ನಡೆಯುತ್ತಿದ್ದೇನೆ ಎಂದುಕೊಳ್ಳುತ್ತಲೇ ಗಿರಕಿ ಹೊಡೆಯುತ್ತಾನೆ, ಎನ್ನುವ ಒಂದು ವಾದವಿದ್ದರೆ, ಭೂಮಿಯ ಗುರುತ್ವಾಕರ್ಷಣೆಯಂತ ತೀವ್ರ ವೈಜ್ಞಾನಿಕ ಸಬೂಬು ಮತ್ತು ಅಂಥಹುದೇ ಹಲವಾರು ಕಾರಣಗಳು ಮತ್ತು ಚರ್ಚೆಗಳಿಗಿದ್ದವು. ಇದನ್ನು ಓದಿ ನಾನು ಆಶ್ಚರ್ಯ ಪಟ್ಟರೂ, ನನ್ನದೇ ಅನುಭವ ಅದೂ ಕೇವಲ ಎರಡು ದಿನಗಳ ಹಿಂದೆ ಆದ ಭಯಂಕರ ಅನುಭವ ಮಾತ್ರ ರೋಮಾಂಚನೀಯ ಹೌದು, ರೋಮಾಂಚನೀಯ ಏಕೆಂದರೆ ನಾನು ಮತ್ತೆ ದಾರಿ ಹಿಡಿದು ಮನೆಗೆ ಬಂದಿದ್ದು.
| Me and Mr. AnneGowdru, Holegandi Mane. |
| My first encounter with Kapila River |
ಜಲಪಾತವೇನೋ ಸುಂದರವಾಗಿತ್ತು, ಆದರೆ, ಯಾವ ಕಡೆ ನೋಡಿದರು ಅಲ್ಲಿಂದ ಮುಂದುವರೆಯಲು ದಾರಿ ಕಾಣಲಿಲ್ಲ. ಎಲ್ಲಾ ಕಡೆ ನೋಡಿದೆ ಹತ್ತಲು ಯಾವುದಾದರು ದಾರಿ ಇರಬಹುದೇನೋ ಅಂತಾ. ಇಲ್ಲ ಖಂಡಿತಾ ದಾರಿ ಇದಲ್ಲ. ತುಂಬಾ ಬೇಸರವಾಗಿ ಈ ಟ್ರೆಕ್ಕಿಂಗ್ನ ಆಸೆಯೇ ಹೋಯಿತು. ಬೆಳಿಗ್ಗೆಯಿಂದ ಏನೂ ತಿಂದಿರಲಿಲ್ಲ, ತಿಂಡಿ ತಿಂದು ವಾಪಸ್ಸು ಹೋಗಲು ನಿರ್ಧರಿಸಿ ಬ್ಯಾಗ್ ಇಳಿಸಿ, ಮುಖ ತೊಳೆದೆ. ಹತ್ತಿರದಲ್ಲೆ ಬಂಡೆಯ ಬಳಿ ಕಾಳಿಂಗ ಸರ್ಪವೊಂದರ ಪೊರೆ ನೋಡಿದೆ, ಬೆಳಿಗ್ಗೆಯಿಂದ ಅಲೆದ ಕಾಡಿನ ಅಗಾಧತೆ ಅರಿವಾಗಿತ್ತು. ಸುಮಾರು ಸಮಯ ಅಲ್ಲಿ ಕಳೆದೆ ವಾಪಸ್ಸು ಹೋಗುವ ನಿರ್ಧಾರ ಮಾಡಿದ್ದರಿಂದ. ಹಲವು ಫೊಟೊ ತೆಗೆದುಕೊಂಡು ವಾಪಸ್ಸು ಅಣ್ಣೆಗೌಡ್ರು ಮನೆಯ ಕಡೆ ಇಳಿಯ ತೊಡಗಿದೆ.
| the stream running on my right side |
| The falls, dead end for me! |
ಸದ್ಯ ಎಲ್ಲೂ ಪೆಟ್ಟಾಗಲಿಲ್ಲ. ಬ್ಯಾಗ್ನಲ್ಲಿದ್ದ ನೀರಿನ ಬಾಟ್ಲಿಯಿಂದ ನೀರು ಕುಡಿದು ಸುತ್ತಲಿನ ಜಾಗದ ವಿಮರ್ಶೆ ಮಾಡತೊಡಗಿದೆ. ಹಾಗು ಡಿಸ್ಕವರಿ ಚಾನೆಲ್ನ ಸರ್ವೈವಲ್ ಟ್ಯಾಕ್ಟಿಕ್ಸ್ ಪ್ರೋಗ್ರಾಮ್ ಜ್ಞಾಪಿಸಿಕೊಂಡೆ, ಪದೆ ಪದೆ ಬೆಳಿಗ್ಗೆ ಬಂದ ದಾರಿ ಜ್ಞಾಪಿಸಿಕೊಂಡು ಬೇರೆ ದಾರಿಯ ಹುಡುಕತೊಡಗಿದೆ. ಹೊಳೆ ದಾಟಬೇಕೆನೋ ನೋಡಿದೆ, ಧೈರ್ಯ ತಂದುಕೊಂಡು ನಡೆಯುತ್ತಾ ಕನಿಷ್ಟ ಎರಡು ದಿನ ತಿಂಡಿಗೆ ಭಯವಿಲ್ಲ, ಕುಡಿಯಲು ನೀರಿದೆ. ರಾತ್ರಿ ಕಳೆಯಲು ಟೆಂಟ್ ಇದೆ, ಟಾರ್ಚ್ ಇದೆ, ಆದರೆ ಬೆಂಕಿ ಪೊಟ್ಟಣ ಇಲ್ಲ ಎಂದೆಲ್ಲಾ ಯೋಚಿಸಿ ಭಯಪಡಬೇಕಾದ ಪ್ರಮೇಯವಿಲ್ಲ ಎಂದು ನಾನೇ ಹೇಳಿಕೊಳ್ಳುತ್ತಾ ಮತ್ತದೆ ದಾರಿಯಲ್ಲಿ ನಡೆಯುತ್ತ ಹೊರಟೆ. ಜಲಪಾತದ ದಾರಿಯಲ್ಲಿ ಬರುವಾಗ ದನಗಳು ಮೇಯುತ್ತಿದ್ದುದು ಕಂಡಿದ್ದೆ. ಸಂಜೆಯಾಗುತ್ತಲೇ ಯಾವುದಾದರೂ ದನದ ಹಿಂದೆ ಹೋದರೆ ಯಾವುದಾದರೂ ಒಂದು ಮನೆಯನ್ನು ಮುಟ್ಟಬಹುದು ಎನ್ನುವ ಉಪಾಯ ಬೇರೆ ಹೊಳೆಯಿತು. ಇವಲ್ಲವುಗಳ ಮಧ್ಯೆ ಕೂಗುವುದನ್ನೇ ಮರೆತಿದ್ದೆ, ಮೊಬೈಲ್ ಜ್ಞಾಪಕ ಬಂದರೂ ಅಲ್ಲಿನ ಲೋಕಲ್ ಕಾಂಟಾಕ್ಟ್ ಯಾರು ಇರಲಿಲ್ಲ. ಹೀಗೆಲ್ಲಾ ಒಬ್ಬನೇ ಆಲೋಚಿಸುತ್ತಾ ನಡೆಯುತ್ತಲೇ ಇದ್ದೇ.
ಬೆಳಿಗ್ಗೆ ನಾನು ಕಂಡ ಚಾವಡಿ ಕಟ್ಟೆ ಬಂತು. ನಾನು ಮೊದಲ ಬಾರಿ ಹೊಳೆ ದಾಟಿ ಬಂದಿದ್ದಾಗ ಈ ಕಟ್ಟೆ ದಾಟಿ ಹೋಗಿದ್ದೆ, ಹಾಗು ಈ ದಾರಿಯಲ್ಲಿ ಶಿರಾಡಿ ಘಾಟ್ ಕಡೆ ದಾರಿ ತಪ್ಪಿದ್ದೆ. ಈ ಬಾರಿ ಈ ದಾರಿಯಲ್ಲಿ ಒಂದು ಕೋಲಿನಿಂದ ಬಾಣದ ಗುರುತು ಹಾಕಿ ಪಕ್ಕದಲ್ಲಿ ಒಂದು ಎಂದು ಬರೆದೆ. ಯಾವುದಾದರು ಕವಲು ದಾರಿ ಇರಬಹುದೇನೋ ಎಂದು ತೀವ್ರವಾಗಿ ಗಮನಿಸುತ್ತ ಸುಮಾರು ಒಂದತ್ತು ನಿಮಿಷ ನಡೆದಿರಬಹುದು ಆ ದಾರಿಯು ಮತ್ತೆ ಹೊಳೆ ದಾರಿಯೇ ಎಂದು ಗಮನಿಸಲು ತುಂಬಾ ಸಮಯವೇನು ಆಗಲಿಲ್ಲ. ಇಂತಹ ಸಮಯದಲ್ಲೂ ಇದೊಂದು ಅಮೇಜಿಂಗ್ ಎಕ್ಸ್ಪೀರಿಯನ್ಸ್ ಎಂದಂದುಕೊಳ್ಳುತ್ತಲೇ ಇದ್ದೆ. ನಿಧಾನವಾಗಿ ಯಾವುದನ್ನು ನಾನು ಸ್ಪಷ್ಟವಾಗಿ ಯೋಚಿಸದಾದೆ. ಬೆಳಿಗ್ಗೆಯೇನೋ ದಾರಿ ತಿಳಿಯದೇ ತುಂಬಾ ದೂರ ನಡೆದಿದ್ದೆ, ಈಗ ವಾಪಸ್ಸು ಹೋಗಲು ಸಹಾ ದಾರಿ ತಿಳಿಯದೇ ಬಹಳಷ್ಟು ಒದ್ದಾಡಬೇಕಾಯಿತು.
ಬೆಳಿಗ್ಗೆಯಿಂದ ಹೊಳೆ ದಾಟುವಾಗ ಶೂ ಬಿಚ್ಚುತ್ತಿರಲೇ ಇಲ್ಲ. ನೆಂದ ಷೂ, ನೆಂದ ಪ್ಯಾಂಟ್, ಬಿಸಿಲಿನಿಂದ ನೆನಯುತ್ತಿದ್ದ ಟಿ-ಷರ್ಟ್. ಒಂದೊಂದು ಬಾರಿಯೂ ಹೊಳೆಯ ಬಳಿ ಬಂದು ಅದು ಬಂದ ದಾರಿಯೇ ಎಂದು ತಿಳಿಯುವಷ್ಟರಲ್ಲಿ ಹದಿನೈದು ನಿಮಿಷಗಳಿಗಿಂತಲೂ ಹೆಚ್ಚು ಸಮಯವಾಗುತ್ತಿತ್ತು. ಗುಡ್ಡದ ದಾರಿಯ ಕಡೆ ಹೋದರೆ ಬೇರೆ ದಾರಿಯೇನಾದರು ಸಿಗಬಹುದೇನೋ ಎಂದು ಹೊಳೆ ದಾಟಿ ನಡೆದೆ. ಅಲ್ಲೊಂದು ಕಡೆ ಬಿದಿರು ಮರಗಳು ಕಪ್ಪಾಗಿ ಬಿದ್ದಿದ್ದವು, ಅದನ್ನು ಗುರ್ತಿಸಿಕೊಂಡು ಮುಂದುವರೆದಂತೆ ಜಲಪಾತದ ದಾರಿ ಬಂತು. ಇದಂತು ದಾರಿಯಲ್ಲ ಎಂದು ವಾಪಸ್ಸು ಬಂದೆ, ಎಲ್ಲಿಗೆ ಎಂದರೆ ಹೊಳೆಯ ಬಳಿ. ಈ ಬಾರಿ ಎಡದ ದಾರಿ ಬಿಟ್ಟು ಇನ್ನೊಂದು ದಾರಿಯಲ್ಲಿ ಬಾಣದ ಗುರುತು ಹಾಕಿ ೨ ಎಂದು ಗುರುತಿಸಿದೆ, ಈ ದಾರಿಯು ಮತ್ತೆ ಹೊಳೆಯ ಕಡೆಗೆ ಬಂತು, ಮತಿ ಹೋಗುವ ಹಾಗಾಯಿತು. ನೆಮ್ಮದಿಯಾಗಿ ಒಂದೆಡೆ ಕುಳಿತುಕೊಳ್ಳಲು ಸಹ ಸಹನೆಯಿರಲಿಲ್ಲ... ಬೇಗ ಅಣ್ಣೆಗೌಡ್ರು ಮನೆಗೆ ವಾಪಸ್ಸಗುವ ಮನಸ್ಸು. ಈ ಗೊಂದಲದಲ್ಲಿ ವಿವೇಚನೆಯನ್ನೇ ಕಳೆದಕೊಂಡಂತಾಗಿತ್ತು. ತುಂಬಾ ಭಯಭೀತನಾಗೇನು ಇರಲಿಲ್ಲವಾದರೂ ತಲೆ ಕೆಟ್ಟಹಾಗಿತ್ತು.
ಹಾಗೆಯೇ ನಿಂತು, ಮತ್ತೆ ಬೆಳಗಿನದೆಲ್ಲವನ್ನು ಜ್ಞಾಪಿಸಿಕೊಂಡೆ. ಬೆಳಿಗ್ಗೆ ತೆಗೆದ ಫೋಟೊ ಜ್ಞಾಪಕಕ್ಕೆ ಬಂದು ಹೇಗೆ ನಿಂತೆ, ಹೇಗೆ ತೆಗೆದೆ ಯಾವುದನ್ನು ಖಚಿತವಾಗಿ ಹೇಳಲಾಗಲಿಲ್ಲ. ಆಗ ಕ್ಯಾಮೆರ ಹೊರ ತೆಗೆದು ಪ್ರಿವ್ಯೂನಲ್ಲಿ ಫೋಟೋಗಳನ್ನು ನೋಡಿ, ಯಾವ ಜಾಗದಲ್ಲಿ ನಿಂತು ಫೋಟೋ ತೆಗೆದೆನೋ ತುಲನೆ ಮಾಡತೊಡಗಿದೆ. ಬೆಳಿಗ್ಗೆ ದಾಟಿದ ಹೊಳೆಯ ಆಚೆ ದಾರಿ ಯಾವುದು ಕಾಣಲಿಲ್ಲ. ಈಗ ನೀರು ಹೆಚ್ಚಾದಂತೆ ಭಾಸವಾಗ ತೊಡಗಿತು. ಹುಡುಗನ ಕೈ ಹಿಡಿದು ದಾಟಿದ್ದೆ, ಈಗ ದಾಟಲು ಭಯ. ನೀರಿನ ಆಳ ಒಂದೊಂದು ಕಡೆ ಸೊಂಟದ ಬಳಿಯವರೆಗೂ ಬರುತ್ತಿತ್ತು. ಅಸ್ಸೆಸ್ ಮಾಡಿದೆ. ಹೊಳೆಯ ಆ ಬದಿಗೆ ದಾರಿ ಕಾಣದೇ ಹೋದರು ದಾರಿ ಇರಬಹುದು, ಹಾಗೂ ಹರಿಯುತ್ತಿರುವ ನೀರಿನಲ್ಲಿ ಮುಳುಗುವ ಭಯವಿರಲಿಲ್ಲ, ತಲೆಗೆ, ಕಾಲಿಗೆ ಪೆಟ್ಟಾಗುವ ಸಾಧ್ಯತೆಗಳನ್ನು ಹೊರತುಪಡಿಸಿದರೆ. ಕ್ಯಾಮೆರ, ಮೊಬೈಲ್ ಬ್ಯಾಗ್ ಸೇರಿದವು, ಒಂದು ಗಟ್ಟಿಯಾದ ಕೋಲನ್ನು ಹಿಡಿದು ದೇವರನ್ನು ನೆನೆದು ಧೈರ್ಯ ಮಾಡಿ ನೀರಿಗಿಳಿದೆ. ಬರ ಬರುತ್ತ ಆಳವಾಗುತ್ತಿತ್ತು, ಬಂಡೆಗಳ ನಡುವಿನ ನೀರಿನ ಹರಿವು ಜಾಸ್ತಿ ಇರುವ ಕಡೆ ಬಳಸಿ ಬಂಡೆಗಳನ್ನು ಹಿಡಿದು ಕೇವಲ ೫೦, ೬೦ ಅಡಿ ಅಗಲ ಆ ಕಪಿಲಾ ನದಿಯನ್ನು ಭಯ ಮತ್ತು ಎಕ್ಸ್ಟ್ರೀಮ್ ಕಾಳಜಿಯಿಂದ ದಾಟಿದೆ. ಮುಂದೆ ಬಂದಾಗ ಒಂದು ಕಾಲು ದಾರಿ ಮತ್ತು ಗೌಡ್ರ ಹೊಲದ ಬೇಲಿ ಕಾಣಿಸಿತು, ನನಗೆ ನೆಮ್ಮದಿಯಾಯಿತು. ಅಣ್ಣೇಗೌಡ್ರು ಮನಗೆ ಬಂದೆ ಸುಸ್ತಾಗಿ ಕುಳಿತೆ. ಸುಮಾರು ಎರಡು ಗಂಟೆಗಳ ಕಾಲ ನಾನು ಅಲ್ಲಲ್ಲೆ ಸುತ್ತುಹಾಕಿದ್ದೆ. ಗೌಡ್ರು ಎರಡುಬಾರಿ ಹೊಳೆ ಸಿಗುತ್ತದೆ ಎಂದಿದ್ದು ಆ ನದಿ ಸುತ್ತಿ ಬಳಸಿ ಹರಿಯುತ್ತಿದ್ದರಿಂದ, ಹಾಗೂ ನಾನು ದಾರಿ ಕಳೆದುಕೊಂಡಿದ್ದು ಅದರ ಸಲುವಾಗಿಯೇ. ಬೆಳಿಗ್ಗೆ ದಾರಿ ತಪ್ಪಿದ್ದು ಒಂದು, ಜಲಪಾತದ ಬಳಿ ದಾರಿ ಕೊನೆಗೊಂಡಿದ್ದು ಎರಡು, ಆ ದೊಡ್ಡ ಕಾಡಿನ ದಾರಿಯಲ್ಲಿ ಕೊನೆಯವರೆಗೂ ಎಲ್ಲೂ ಗುಡ್ಡವೇ ಕಾಣುತ್ತಿರಲಿಲ್ಲ, ಹೀಗೆ ಮೂರು ಮತ್ತು ಒಂಟಿ ಮನಸ್ಸಿನ ನೂರಾರು ಯೋಚನೆಗಳು ನಾನು ದಾರಿ ತಪ್ಪಲು ಕಾರಣವಿರಬಹುದು. ಕೊನೆಯ ಕಾರಣವಂತು ಇಂಟರ್ನೆಟ್ನ ಲೇಖನವನ್ನು ದೃಡೀಕರಿಸಿದ ಹಾಗಿತ್ತು.
ಕೊನೆಯದಾಗಿ ನಾನು ಎತ್ತಿನಭುಜ ಚಾರಣ ಮುಗಿಸಿದ ರೀತಿ. ಗೌಡ್ರು ಎಲ್ಲ ವಿಷಯ ತಿಳಿದುಕೊಂಡು ಆ ರಾತ್ರಿ ನಾನು ಅವರ ಮನೆಯಲ್ಲಿ ಉಳಿದುಕೊಳ್ಳಲು ಒಪ್ಪಿ ಯೋಚಿಸುತ್ತಾ ಬೆಳಿಗ್ಗೆಗೆ ನನ್ನ ಜೊತೆ ಗುಡ್ಡಕ್ಕೆ ಹೋಗಲು ಜಗದೀಶ ಎನ್ನುವ ಯುವಕನೊಬ್ಬನನ್ನು ಗುರ್ತುಮಾಡಿದರು. ದಿನವೆಲ್ಲಾ ಅದು ಇದು ಮಾತನಾಡುತ್ತ ಕಾಡಿನ ಬಗ್ಗೆ, ಅವರು ತೋಟಮಾಡಿದ ರೀತಿ ಎಲ್ಲವನ್ನು ವಿವರಿಸುತ್ತ ಹತ್ತಿರವಾದರು. ಬೆಳಿಗ್ಗೆ ರುಚಿಯಾದ ಅಕ್ಕಿ ರೊಟ್ಟಿ ತಿಂದು ಅವರಿಂದ ಆತ್ಮೀಯವಾಗಿ ಬೀಳ್ಕೊಂಡ ನನ್ನೊಂದಿಗೆ ಎರಡು ನಾಯಿಗಳು, ಜಗದೀಶ ಮತ್ತು ಸಿಂಗಲ್ ಬ್ಯಾರೆಲ್ ಬಂದೂಕದೊಂದಿಗೆ ಎತ್ತಿನಭುಜಕ್ಕೆ ಹೊರಡಲು ಅನುವಾದರು. ನಿನ್ನೆಯ ದಿನ ಹೋದ ದಾರಿಯಲ್ಲಿ ಹೋಗದೆ ನೀರು ಕಡಿಮೆ ಮತ್ತು ಎರಡು ಬಾರಿ ನೀರಿಗಿಳಿಯುವುದನ್ನು ತಪ್ಪಿಸಲು ಬೇರೊಂದು ದಾರಿಯಲ್ಲಿ ಬಂದ ನಾವು ಕಪ್ಪಾಗಿ ಬಿದ್ದಿದ್ದ ಬಿದಿರು ಮೆಳೆಯ ಕಡೆ ಬಂದಾಗ ನಾನು ಮಾಡಿದ್ದ ಗುರ್ತುಗಳು ಮತ್ತೆ ನನ್ನನ್ನು ಅಣಕಿಸಿದ್ದವು. ಆದರೆ ಜಲಪಾತದ ದಾರಿಯಲ್ಲೇ ಸಾಗಿದ ನಾವು ಅದಕ್ಕಿಂತ ಮುಂಚೆ ಅದೇ ಗೌಡ್ರು ಅಂದಂತೆ ಎಡದ ದಾರಿಗೆ ಹತ್ತಲು ಶುರು ಮಾಡಿದೆವು. ಇದಂತು ದಾರಿಯೆಂದು ನಾನು ಖಂಡಿತ ಒಪ್ಪುವುದಿಲ್ಲ, ಗುರ್ತೇಸಿಗದ ಹಾಗೆ ಆ ದಾರಿಯಿತ್ತು. ಅಲ್ಲಿಂದ ಶುರುವಾದ ಏರಿನ ದಾರಿ ಕೊನೆಯವರೆಗೂ ಮುಗಿಯಲಿಲ್ಲ. ಬಲು ದಟ್ಟವಾದ ಕಾಡಿನಲ್ಲಿ ನುಸುಳುತ್ತಾ ಹೋದೆವು. ಮರಗಳಂತೂ ಕೊನೆ ಮೊದಲಿಲ್ಲದೇ ಬಂದೇ ಬರುತ್ತಿತ್ತು, ಎಲ್ಲಿ ಬೆಟ್ಟದ ತುದಿ ದೊರೆತು ದಾರಿ ಸ್ವಲ್ಪ ಸಮನಾಗುವುದೋ ಎಂದು ಕೇಳಲೇಬೇಕಾಯಿತು. ಬೆಟ್ಟದ ಒಂದು ಬದಿಯಂತು ನಮ್ಮ ಎತ್ತರಕ್ಕೆ ಬೆಳೆದು ನನಗಿಂತ ಒಂದತ್ತು ಅಡಿ ದೂರದಲ್ಲಿದ್ದ ನನ್ನ ಗೈಡು ಕೂಡ ಕಾಣುತ್ತಿರಲಿಲ್ಲ. ತೀರ ಮಾತನಾಡುವ ಧಾಟಿ ಇಲ್ಲದ ಜಗದೀಶ ಭಾರವಾದ ಗನ್ನು ಹೆಗಲೇರಿಸಿ ಬಿರ ಬಿರನೇ ನಡೆಯುತ್ತಿದ್ದ. ಇಲ್ಲಿ ೫೦ ಭಾಗದಷ್ಟು ಹತ್ತಿದ ನಂತರ ನಾನು ಸುಸ್ತಾದೆ. ಹತ್ತುವುದು ನಿಧಾನವಾಯಿತು, ಜಿಗಣೆಗಳು ಇದ್ದವೆಂಬುದು ಬೈ ಡಿಫ಼ಾಲ್ಟ್ ಸ್ಟೇಟ್ಮೆಂಟ್. ದಣಿವಾರಿಸಿಕೊಳ್ಳಲು ನಿಂತರೆ ಒಂದಿಂಚಿಗಿಂತಲು ಉದ್ದುದ್ದ ಜಿಗಣೆಗಳು ಸೈನಿಕರಂತೆ ಆಕ್ರಮಣಕ್ಕೆ ಬರುತ್ತಿದ್ದವು. ಎಲ್ಲೆಲ್ಲಿ ಹತ್ತಿದವೋ ನಾನಂತು ನೋಡಿಕೊಂಡಿರಲಿಲ್ಲ, ಆಗಾಗ ಕೊಡವಿ ನಡೆಯುತ್ತಿದ್ದೆನಷ್ಟೆ. ಮನೆಗೆ ಬಂದು ಆದ ಚಿಕ್ಕ ಗಾಯಗಳನ್ನೆಲ್ಲ ಎಣಿಸಿದಾಗ ಒಟ್ಟು 43ಕಡೆ ಕಚ್ಚಿದ್ದವು. 44ನೆಯದು ನನಗೆ ತಿಳಿದಿದ್ದು ಎರಡು ದಿನ ಕಳೆದ ನಂತರ ಪ್ಯಾಂಟ್ ಏರಿಸಿಕೊಳ್ಳುವಾಗ, ಕಿಬ್ಬೊಟ್ಟೆ ಬಳಿ ತೊಡೆ ತುರಿಕೆಯಾಗಿ ಏನೆಂದು ನೋಡಿದರೆ ಅಲ್ಲಿ ದಾಖಲೆಯ 44ನೇ ಜಿಗಣೆ ಗುರುತು. ಭಯ ಮಿಶ್ರಿತ ನಗು ತಡೆಯಲಾಗಲಿಲ್ಲ, ಮೇಲಿನವರೆಗೂ ಹತ್ತುವವು ಎಂದಷ್ಟೇ ಕೇಳಿದ್ದೆ, ಈಗ ಸ್ವತಃ ಅನುಭವಕ್ಕೆ ಬಂತು. ಕೊನೆಯ ಘಟ್ಟಕ್ಕೆ ಬಂದು ನೋಡಿದರೆ ಎತ್ತಿನಭುಜ ಭವ್ಯವಾಗಿ ನಿಂತಿತ್ತು. ಸುತ್ತಲೂ ವಿಶಾಲ ಕಾಡಿನ ಹರವು ನಾನು ಒಂಟಿಯಾಗಿ ಹತ್ತಿಬರುವೆ ಎಂದಂದುಕೊಂಡಿದ್ದ ಹಮ್ಮು ಎಲ್ಲೋ ಕಾಡಿನ ಮಧ್ಯೆ ಲೀನವಾಗಿತ್ತು. ಇಷ್ಟು ದಿನಗಳ ಚಾರಣದಲ್ಲಿ ದಟ್ಟ ಕಾಡಿನ ಮರಗಳ ಗ್ರೀನ್ ಬ್ಯಾಕ್ಗ್ರೌಂಡನ್ನು ಮಾತ್ರನೋಡಿದ್ದೆ, ಅವುಗಳ ಮಧ್ಯೆ ದಾರಿಯಿಲ್ಲದ ದಾರಿಯಲ್ಲಿ ನುಸುಳಿ ಈ ಬೆಟ್ಟವನ್ನು ಹತ್ತಿ ರೋಮಾಂಚನೀಯ ಅನುಭವವನ್ನು ಕೇವಲ ಹದಿನೈದು ನಿಮಿಷ ಮಾತ್ರ ಹೊಂದುವಂತಾಯಿತು. ಅದಾಗಲೇ ಮೋಡ ಕಪ್ಪಿಡುತ್ತಿತ್ತು, ಜಗದೀಶ ವಾಪಸ್ಸು ಹೋಗಬೇಕಿತ್ತು. ದೂರದಲ್ಲಿ ಬೈರಾಪುರದ ದಾರಿ ಕಾಣುವವರೆಗೆ ನನ್ನನ್ನು ಕರೆತಂದು ಜಗದೀಶ ಅಲ್ಲಿಂದ ಬೀಳ್ಕೊಂಡ.
![]() |
| Waiting for the bus at Bairapura, a beautiful, calm village. |


Comments